ಎಸ್. ನಾರಾಯಣ ಶೆಟ್ಟಿಯವರು (೧೩-೪-೧೯೩೦ - ೧೬ ಮೇ ೨೦೧೧) ಕನ್ನಡದ ಸಾಹಿತಿಯಾಗಿದ್ದರು. ಸುಜನಾ ಎಂಬುದು ಇವರ ಕಾವ್ಯ ನಾಮ. == ಬಾಲ್ಯ ಮತ್ತು ಜಿವನ == ೧೯೩೦ ಏಪ್ರಿಲ್ ೧೩ ರಂದು ಕರ್ನಾಟಕದ ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ (ಕೆ.ಆರ್. ಪೇಟೆ) ತಾಲ್ಲೂಕಿನ ಹೊಸಹೊಳಲುವಿನಲ್ಲಿ ಜನಿಸಿದ ಇವರ ತಂದೆ ಸುಬ್ಬಶೆಟ್ಟಿಯವರು ಹಾಗೂ ತಾಯಿ ಗೌರಮ್ಮನವರು. ಪತ್ನಿ ಲಕ್ಷ್ಮಿ ಹೊಸಹೊಳಲಿನಲ್ಲೇ ಪ್ರಾಥಮಿಕ ವಿದ್ಯಾಭ್ಯಾಸ ಪೂರೈಸಿದ ಸುಜನಾ ಹೊಳೆ ನರಸೀಪುರದಲ್ಲಿ ಪ್ರೌಢಶಿಕ್ಷಣ ಆನಂತರ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಂದುವರಿಸಿದ್ದರು. ವಿದ್ಯಾರ್ಥಿ ದೆಸೆಯಲ್ಲೇ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಬಹಳವಾಗಿ ಆಕರ್ಷಿತರಾಗಿದ್ದ ಅವರು ಮೈಸೂರು ವಿಶ್ವವಿದ್ಯಾನಿಲಯದಿಂದ ಬಿ.ಎ ಆನರ್ಸ್ ಪದವಿಯನ್ನು ಪಡೆದು ಸಾಹಿತ್ಯ ಕೃಷಿ ಮುಂದುವರಿಸಿದರು. ಮೈಸೂರು ಮಹಾರಾಜ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಯುವರಾಜ ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದ ಅವರು ಆನಂತರ ಒಂದೂವರೆ ವರ್ಷ ಮೈಸೂರು ವಿಶ್ವವಿದ್ಯಾನಿಲಯದ ಉಪ ಕುಲಸಚಿವರಾಗಿಯೂ ಕೆಲಸ ಮಾಡಿದ್ದರು. ೨೦೦೯ರಲ್ಲಿ ಗೌರವ ಡಾಕ್ಟರೇಟ್ ಪದವಿ ಸ್ವೀಕರಿಸಿದ್ದರು.ಸೇವೆಯಿಂದ ನಿವೃತ್ತಿಯಾದ ಬಳಿಕ ಮೈಸೂರಿನಲ್ಲಿ ಕುಟುಂಬದೊಂದಿಗೆ ವಾಸಿಸುತ್ತಿದ್ದರು.ಇವರು ೨೦೧೧ರ ಮೇ ೧೬ ರಂದು ಮೈಸೂರಿನಲ್ಲಿ ನಿಧನರಾದರು. == ಕವಿ == ಸುಜನಾ ವಿಜ್ಞಾನದ ಆಸಕ್ತಿಯ ಕವಿಯೂ ಆಗಿದ್ದರು. ನಾಣ್ಯ ಯಾತ್ರೆ ಒಂದೇ ಸೂರಿನಡಿಯಲ್ಲಿ ಅವರ ಜನಪ್ರಿಯ ಕವನ ಸಂಕಲನಗಳಾಗಿದ್ದವು. ಅಲ್ಲದೆ ಗ್ರೀಕ್ ಭಾಷೆಯ ಏಜಾಕ್ಸ್ ಎಂಬ ಪ್ರಖ್ಯಾತ ನಾಟಕವನ್ನು ಕನ್ನಡಕ್ಕೆ ಅನುವಾದ ಮಾಡುವ ಮೂಲಕ ಸುಜನಾ ಅನುವಾದ ಕ್ಷೇತ್ರದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದರು. ಆ ಬಳಿಕ "ಯುಗಸಂಧ್ಯಾ" ಎಂಬ ಮಹಾಕಾವ್ಯವನ್ನು ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಣೆ ಮಾಡುವ ಮೂಲಕ ಮಹಾಕಾವ್ಯ ಬರೆದ ಕೆಲವೇ ಕವಿಗಳ ಸಾಲಿಗೆ ಸೇರಿದ್ದರು. == ಉಲ್ಲೇಖಗಳು ==